ಬಲೇ ತೆಲಿಪಾಲೆ ಕಾಮಿಡಿ ಶೋನಲ್ಲಿ ಮಿಂಚಿದ ಸುಳ್ಯದ ಪ್ರತಿಭೆ ರಂಜು ರೈ ಸುಳ್ಯ ಇವರ ಸಾಧನೆಯ ಹಾದಿ.
ಮನುಷ್ಯ ಹುಟ್ಟಿದ ತಕ್ಷಣ ಆತನಿಗೂ ಒಂದು ಪ್ರಾಣಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ನಂತರ ಕ್ರಮೇಣ ಮಾನವ ತಾನು ಮಾಡುವ ಕಾರ್ಯ ಮತ್ತು ಸಾಧನೆಗಳಿಂದ ಆತನಿಗೊಂದು ನಿಜವಾದ ಗುರುತು ಬರುತ್ತದೆ. ಮನುಷ್ಯನಾಗಿ ಹುಟ್ಟುವುದು ಪ್ರಕೃತಿ ಧರ್ಮ. ಆದರೆ ಹುಟ್ಟಿದ ನಂತರ ಆ ಹುಟ್ಟಿಗೆ ಅರ್ಥ ಕಲ್ಪಿಸುವುದು ಮನುಷ್ಯನ ಧರ್ಮ. ನಮ್ಮ ಬದುಕಿಗೆ ಅರ್ಥ ಕಲ್ಪಿಸಬೇಕಾದರೆ ಬದುಕಿರುವಾಗ ನಮ್ಮ ಕೈಲಾದಷ್ಟು ಕಲಾ ಸೇವೆ, ಧಾರ್ಮಿಕ ಸೇವೆ ಅಥವಾ ಯಾವುದೇ ಸತ್ಕಾರ್ಯಗಳನ್ನೂ ಮಾಡುತ್ತಿರಬೇಕು. ಹೀಗೆ ತನ್ನ ಜೀವನ ಸಾರ್ಥಕತೆಗಾಗಿ ಸದಾ ಕಲಾ ಸೇವೆಯನ್ನು ತನ್ನನ್ನು ತಾನು ತೊಡಗಿಸಿಕೊಂಡಿರುವ ಸುಳ್ಯ ತಾಲೂಕಿನ ರಂಜು ರೈ ಸುಳ್ಯ ಇವರು ಬೆಳೆದು ಬಂದ ಹಾದಿ ಮತ್ತು ಸಾಧನೆಯ ಕಥನಗಳು ”ಸಾಧಕರಿಗೊಂದು ಸಲಾಂ” ಕಾಲಂನಲ್ಲಿ.

ಇವರ ಪೂರ್ಣ ನಾಮ ಧ್ಯೇಯ “ರಂಜಿತ್ ರೈ ಸುಳ್ಯ”. ಎಲ್ಲರೂ ಇವರನ್ನು ರಂಜು ಎಂಬ ನಾಮಾಂಕಿತದಿಂದ ಕರೆದು ಪ್ರಸಿದ್ಧಿ ಆಗಿದ್ದಾರೆ. ಇವರು ಜನರೆದುರಿಗೆ ಬಂದರೆ ಸಾಕು, ಎಂತಹಾ ಮಹಾನುಭಾವರಾದರೂ ನಗಲೇ ಬೇಕು ಅನ್ನುವ ಕಾಮಿಡಿ ಖತರ್ನಾಕ್.
ಇವರು ಸುಳ್ಯ ಶ್ರೀಮತಿ ಮೀನಾಕ್ಷಿ ರೈ ಮತ್ತು ನಾರಾಯಣ ರೈ ದಂಪತಿಗಳ ಪುತ್ರ. ಇವರಿಗೆ ಒಬ್ಬಳೇ ತಂಗಿ ರಶ್ಮಿತಾ ರೈ. ಇವರು ಹುಟ್ಟಿದ್ದು 15/01/1993ರಂದು ಸುಳ್ಯ ತಾಲೂಕಿನಲ್ಲಿ. ಬೆಳೆದಿದ್ದು ಪುತ್ತೂರು ತಾಲೂಕಿನ ಸ್ಥಾನತ್ತಾರು ಮಾಡಾವಿನಲ್ಲಿ. ಬಾಲ್ಯದಿಂದಲೇ ತುಂಬಾ ಕಷ್ಟಗಳನ್ನು ಅನುಭವಿಸಿ, ಕೀಲು ಮಾತುಗಳಿಗೆ ಕಿವಿಗೊಡದೆ, ಅಪಹಾಸ್ಯದ ನಡುವಿನಲ್ಲಿಯೂ ತನ್ನ ಸಾಧನೆಯ ಛಲ ಬಿಡದೆ ತನ್ನ ಅದ್ಭುತ ಪ್ರಯತ್ನದಿಂದ ಈ ಮಟ್ಟದವರೆಗೆ ಬೆಳೆದಿರುತ್ತಾರೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪರವಳಿಕೆ ಶಾಲೆಯಲ್ಲಿ 1ನೇ ತರಗತಿಯಿಂದ 4ನೇ ತರಗತಿಯವರೆಗೆ ಕಲಿತು, ನಂತರ 5 ರಿಂದ 7 ಮಾಡಾವು ಬೊಳಿಕ್ಕಳ ಮತ್ತು 8ರಿಂದ 10 ಕೆಯ್ಯೂರು ಹಾಗೂ ಪಿಯುಸಿ ವಿದ್ಯಾಭ್ಯಾಸವನ್ನು ಬೆಸೆಂಟ್ ಇವಿನಿಂಗ್ ಕಾಲೇಜ್ ಮಂಗಳೂರು ಇಲ್ಲಿ ಪಡೆದಿರುತ್ತಾರೆ. ಶಾಲಾ ಕಾಲೇಜು ದಿನಗಳಲ್ಲಿ ಕಬಡ್ಡಿ, ಖೋಖೋ, ವಾಲಿಬಾಲ್ ಆಟ ಎಂದರೆ ಇವರಿಗೆ ತುಂಬಾ ಇಷ್ಟ.
ನಾಟಕ ರಂಗದ ಬಗ್ಗೆ ಯಾವುದೇ ಮಾಹಿತಿಗಳು ಇವರಿಗೆ ಇರಲಿಲ್ಲ. ಆದರೆ, ಕಲಾವಿದ ಆಗಬೇಕೆನ್ನುವ ಆಸೆ ಇದ್ದರೂ ಯಾರ ಸಹಕಾರವೂ ಸಿಗುತ್ತಿರಲಿಲ್ಲ. ಇವರ ತಂದೆ ನಾರಾಯಣ ರೈ ಇವರು ಹವ್ಯಾಸಿ ಕಲಾವಿದ. ಆದ್ದರಿಂದ ಅವರ ರಕ್ತವೇ ಇವರ ಈ ಕಲಾ ಮಾತೆ ಶಾರದೆಯ ಸೇವೆಗೆ ಮೂಲ ಕಾರಣ ಎನ್ನಬಹುದು. ಮೊದಲನೆಯದಾಗಿ ಇವರು ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿದ್ದು ಇವರ ಬಾವ ಯೋಗೀಶ್ ರೈ ಮಾಡಾವು ಇವರ ಸಹಾಯದೊಂದಿಗೆ “ಫಲ್ಗುಣಿ” ಕಲಾ ತಂಡ ವೇಣೂರು ಇವರುಗಳ ಜೊತೆ ಊರಿನವರು ಸೇರಿ ಪ್ರದರ್ಶಿಸಿದ ರವಿಚಂದ್ರ ಸಾಲಿಯಾನ್ ವೇಣೂರು ರಚಿಸಿದ “ಪುರ್ಸಗ್ ಪುರ್ಸೊತಿಜ್ಜಿ” ನಾಟಕದಲ್ಲಿ ಸ್ತ್ರೀ ಪಾತ್ರಧಾರಿಯಾಗಿ.
ಕಲಾವಿದರೆಂದರೆ ಜೀವನದ ಸತ್ಯಾಸತ್ಯತೆಗಳನ್ನು ತಿಳಿಸಿ ಜನರ ಮುಖದಲ್ಲಿ ನಗು ತರಿಸುವವರು. ಅಂತಹ ಯುವ ಪ್ರತಿಭೆ ನಮ್ಮ ರಂಜು ಅಣ್ಣ. ಇವರು ವೇದಿಕೆ ಮೇಲೆ ಬಂದರೆ ಸಾಕು, ಅದೇನೊ ಕಲೆ ಇವರ ಮಾತಿನ ಚಟಾಕಿಯಿಂದಲೇ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಶಿ ಬ್ರದರ್ಸ್ ಸುಳ್ಯ ಇವರುಗಳ ಜೊತೆ ಸೇರಿ “ಸಂಭ್ರಮ ಕಲಾವಿದರು” ಸುಳ್ಯ ತಂಡವನ್ನು ರಚಿಸಿ ಸುಬ್ಬು ಸಂಟ್ಯಾರ್ ಬರೆದ ನಾಟಕಗಳನ್ನು ಪ್ರದರ್ಶಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ನಂತರ ಈಗ ಶರತ್ ಆಳ್ವ ಸಾರಥ್ಯದಲ್ಲಿ ಸುಬ್ಬು ಸಂಟ್ಯಾರ್ ಇವರ ನಿರ್ದೇಶನದ “ಬೊಳ್ಳಿ ಬೊಲ್ಪು” ತಂಡದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
Also Read: ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ”ತುಳುವ ಸಿರಿ” ‘ಎಂ. ಅಧ್ವಿಕಾ ಶೆಟ್ಟಿ” ಯವರ ಸಾಧನೆಯ ಹಾದಿ.
Also Read: ತುಳು ಚಿತ್ರರಂಗದ ‘ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ ಸಾಧನೆಯ ಹಾದಿ
ನಂತರ ಇವರ ಆತ್ಮೀಯ “ಸಾಯಿ ದೀಕ್ಷಿತ್ ಪುತ್ತೂರು” ಇವರ “ಸಾಯಿ ಶೃಂಗಾರ ಪುತ್ತೂರು” ತಂಡದ ಜೊತೆ ನಮ್ಮ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುವ “ಬಲೆತೆಲಿಪಾಲೆ” ಶೋನಲ್ಲಿ ಪಾಲು ಪಡೆದು ಬಲೆತೆಲಿಪಾಲೆ ಸೀಸನ್ ೭ ರ ಫೈನಲಿಸ್ಟ್ ಗಳಾಗಿದ್ದಾರೆ. ಈ ಸಕ್ಸಸ್ ನಂತರ ಸಾಯಿ ಶೃಂಗಾರ ಪುತ್ತೂರು ಅರ್ಪಿಸುವ “ಮಕ್ಕರ್” ತಂಡದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಡೈಜಿವರ್ಲ್ಡ್ ಚಾನೆಲ್ ನಲ್ಲಿ ಮಕ್ಕರ್ ತಂಡದ ಕಾಮಿಡಿ ಪ್ರದರ್ಶಿಸಿ ಯಶಸ್ವಿಯಾಗಿದ್ದಾರೆ. ಈಗ ಮತ್ತೆ ನಮ್ಮ ಟೀವಿ ಆಯೋಜಿಸುತ್ತಿರುವ “ಉಂದು ನಾಟಕ ಬಲೆ ಬುಲಿಪಾಲೆ” ಎಂಬ ಶೋ ಗೆ ಮಕ್ಕರ್ ತಂಡದ ಸದಸ್ಯನಾದ ಇವರು ಸಾಯಿ ದೀಕ್ಷಿತ್ ಪುತ್ತೂರು ಇವರ ಜೊತೆ ಸೇರಿ ಸಿದ್ದತೆ ನಡೆಸುತ್ತಿದ್ದಾರೆ.
“ಮನಸ್ದ ಕಲ್ಪನೆ” ತುಳು ಕಿರುಚಿತ್ರಕ್ಕೆ ಇವರೇ ಕಥೆ, ನಿರ್ದೇಶನ, ನಟನೆ ಮಾಡಿದ್ದು, ನಂತರ ಸುಷ್ಮಾ ಪೂಜಾರಿ ಇವರ “ಕಾಳಿ” ಎಂಬ ಬಹು ಬಡ್ಜೆಟ್ನ ಕಿರುಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ. ಪುತ್ತೂರು ಭರತ್ ನಿರ್ಮಾಣದ ನವೀನ್ ಕೃಷ್ಣ ನಿರ್ದೇಶನದ “ಮೇಲೊಬ್ಬ ಮಾಯಾವಿ” ಕನ್ನಡ ಚಲನಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿರುವ ಹೆಮ್ಮೆ ಇವರದ್ದು. ಸತೀಶ್ ಪೆರ್ನೆ ಮತ್ತು ಸಾಧನ ರೈ ನಿರ್ಮಾಣದ ಆರ್ಯ ನಿರ್ದೇಶನದ “ಪಿರ್ಕಿಲು ಬತ್ತೆರಾ”ತುಳು ಚಿತ್ರದಲ್ಲಿ ಕಾಮಿಡಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದು ನವ ಕಲಾವಿದನಿಗೆ ಖುಷಿಯ ವಿಚಾರ. ಅಲ್ಲದೆ ಮಕ್ಕರ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಹಲವಾರು ಮನರಂಜನೆಯ ಕಿರುಚಿತ್ರಗಳಲ್ಲಿ ನಟಿಸಿ ವೀಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Also Read: ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ “ಮುದ್ದು ಲಕ್ಷ್ಮೀ ಯ ಡಾ.ಧ್ರುವಂತ್ ” ರ ಸಾಧನೆಯ ಹಾದಿ
Also read: ಪುತ್ತೂರಿನ ಯುವ ಉತ್ಸಾಹಿ ಬರಹಗಾರ, ಕಥೆಗಾರ, ಸಿನಿಮಾ ನಟ “ಸಾಯಿ ದೀಕ್ಷಿತ್ ಪುತ್ತೂರು” ಇವರ ಸಾಧನೆಯ ಹಾದಿ.
ನಿರ್ದೇಶಕನಾಗಬೇಕೆಂಬ ಕನಸು ಇವರದ್ದು. “ಸಾಯಿ ದೀಕ್ಷಿತ್ ಪುತ್ತೂರು” ಇವರ ನಿರ್ದೇಶನದ “ಗುಬ್ಬಚ್ಚಿ” ಟೆಲಿ ಚಿತ್ರದಲ್ಲಿ ನಟನೆಯ ಜೊತೆಗೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೊಬ್ಬ ಅದ್ಭುತ ಬರಹಗಾರನೂ ಹೌದು ಹಲವು ಕವನಗಳು ಕೂಡ ಇವರಿಂದ ರಚಿತವಾಗಿದೆ. ಸಾಧನೆಯ ಛಲ ಇವರದ್ದು. ಬಾಲ್ಯದಿಂದಲೇ ಕಷ್ಟಗಳನ್ನು ಎದುರಿಸಿ ಕೊಂಡು ಬೆಳೆದವರು. ಇವರ ನಟನೆ ಜನರು ಮೆಚ್ಚುವಂತದ್ದು. ನಿರ್ದೇಶಕನಾಗಬೇಕೆಂಬ ಕನಸು ಬಹು ಬೇಗನೇ ಈಡೇರಲಿ ನಮ್ಮೆಲ್ಲರ ಸಹಕಾರ ಇವರ ಮೇಲಿದ್ದರೆ ಇವರ ಸಾಧನೆಯ ಛಲ ಇನ್ನೂ ಎತ್ತರಕ್ಕೆ ಬೆಳೆಯಬಹುದು.
ಇಂದಿನ ಯುವ ಸಮೂಹ ಸಂಪೂರ್ಣ ಆಧುನಿಕತೆಯೆಡೆಗೆ ಒಲವು ತೋರಿಸುತ್ತ ಹಳ್ಳಿ ಬಿಟ್ಟು ಪಟ್ಟಣ ಸೇರಿ, ಪಟ್ಟಣ ಬಿಟ್ಟು ಫಾರಿನ್ ಸೇರಿ ಊರಿನ ಮಣ್ಣಿನ ಗಂಧದ ಪರಿಮಳವನ್ನೇ ಮರೆಯುವಂತಹ ಇಂತಹ ಯುಗದಲ್ಲಿ ನಾನು ಇಲ್ಲೇ ಇದ್ದು ಕಲಾ ಸೇವೆಯಲ್ಲಿ ತನ್ನ ಕೊಡುಗೆ ನೀಡಿ ತಾನು ಹುಟ್ಟಿ ಉಂಡು ಬೆಳೆದ ಮನೆಗೆ ಹಣದ ಕೆಸರಿನ ಬದಲು ಪ್ರೀತಿಯ ಹೆಸರು ತಂದು ಕೀರ್ತಿವಂತನಾಗುವೆ ಎನ್ನುವ ರಂಜು ರೈ ಸುಳ್ಯ ಇವರ ಸಾಧನೆಗೊಂದು ಸಲಾಂ.
ಬರಹ : ರಂಜಿನಿ ಬಂಗೇರ ಕಳಂಗಜೆ
ಸಹಕಾರ: ಸಾಯಿ ದೀಕ್ಷಿತ್ ಪುತ್ತೂರು

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh