ಕವಿ ಕಯ್ಯಾರ
ಕನ್ನಡ ನೆಲವದು ನಮ್ಮದು ಎನ್ನುತ
ಹೊನ್ನಿನ ನುಡಿಯಲಿ ದುಡಿದವರು
ಚೆನ್ನದು ಕಾಸರಗೋಡಿನ ನೆಲವದು
ಕನ್ನಡ ಜನರುಸಿರೆಂದವರು ||
ಶತಮಾನದ ಸವಿ ಬದುಕನು ಸವೆಸುತ
ಮತ ಮನುಜನದದು ಒಂದೆನುತ
ಹಿತ ಮಿತ ಪ್ರೀತಿಯ ಜೊತೆ ಸೌಹಾರ್ದದ
ಜೊತೆ ಸಕಲರನೂ ಕಂಡವರು ||
ದೇಶದ ಭಕ್ತಿಯ ಕೋಶವ ಕಟ್ಟುತ
ಪಾಶವ ಬಿಗಿಯುತ ಭಾಷೆಯಲಿ
ದ್ವೇಷದ ಭಾವನೆ ಇಲ್ಲದೆ ಬದುಕಲು
ರೋಷವದೇತಕೆ ಎಂದವರು. ||
ನಮ್ಮಯ ನಾಡಿದು ಪರರಲಿ ಯಾತಕೆ
ಹೆಮ್ಮೆಯ ಕುಟುಂಬದಂತಿರಲು
ಸುಮ್ಮನೆ ಗಡಿಯಲಿ ವಿವಾದವೇಳಲು
ಹಮ್ಮನು ತೋರಿಸಿ ನಿಂತವರು ||
ಕವಿ : ಡಾ ಸುರೇಶ ನೆಗಳಗುಳಿ